ವರದಿಗಾರರು :
ಬಸವರಾಜ ಕರ್ಕಿಹಳ್ಳಿ ||
ಸ್ಥಳ :
ಕೊಪ್ಪಳ
ವರದಿ ದಿನಾಂಕ :
13-11-2025
ಪ್ರೇರಣಾ ವಿರುದ್ಧ ಗುತ್ತೆದಾರರ ಗುಡುಗು! - ಟಿಪ್ಪರ್, ಜೆಸಿಬಿ ಮಾಲೀಕರಿಂದ ಹೋರಾಟಕ್ಕೆ ಸಾಥ್ - ರೋಡ್ ರೂಲರ್, ಟ್ರ್ಯ
ಕೊಪ್ಪಳ: ಸಂಸದ ರಾಜಶೇಖರ ಹಿಟ್ನಾಳ ಒಡೆತನದ ಪ್ರೇರಣಾ ಸಂಸ್ಥೆ ಮೂಲಕ ಕಟ್ಟಡ ಸಾಮಾಗ್ರಿ ಖರೀದಿ ವಿರೋಧಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ, ಗುತ್ತಿಗೆದಾರರು ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟಿಸಿದರು. ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಗುತ್ತಿಗೆದಾರರು, ಅಶೋಕ ವೃತ್ತದಲ್ಲಿ ಜಮಾಯಿಸಿ ಘೋಷಣೆ ಕೂಗಿದರು. ಪ್ರೇರಣಾ ಸಂಸ್ಥೆ ರದ್ದು ಮಾಡಬೇಕು. ಪ್ಯಾಕೇಜ್ ಮಾಡಿ ಟೆಂಡರ್ ಮಾಡುವುದನ್ನು ಅಧಿಕಾರಿಗಳು ಕೈ ಬಿಡಬೇಕು ಎಂದು ಘೋಷಣೆ ಕೂಗಿದರು. ಕೆಲ ಸುಮಾರು ಅರ್ಧ ಗಂಟೆ ಅಶೋಕ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಯಿತು.
ನಂತರ ಗುತ್ತಿಗೆದಾರರು ಪ್ರತಿಭಟನಾ ಮೆರವಣಿಗೆ ಮುಂದುವರೆಸಿದರು. ಗುತ್ತಿಗೆದಾರರ ಹಿಂದೆಯೇ ಸುಮಾರು 50ಕ್ಕೂ ಹೆಚ್ಚು ಟಿಪ್ಪರ್, ಟ್ರ್ಯಾಕ್ಟರ್, ರೋಡ್ ರೂಲರ್ ಯಂತ್ರಗಳನ್ನು ರಸ್ತೆಗೆ ಇಳಿಸಿದರು. ಇದರಿಂದ ಸಾರಿಗೆ ಬಸ್, ಬೈಕ್ ಸೇರಿ ಸಾರ್ವಜನಿಕರ ವಾಹನ ಓಡಾಟಕ್ಕೆ ತೊಂದರೆ ಉಂಟಾಯಿತು. ಅಶೋಕ ವೃತ್ತದಿಂದ ಬಸವೇಶ್ವರ ವೃತ್ತಕ್ಕೆ ಬಂದ ಹೋರಾಟಗಾರರು, ವೃತ್ತದಲ್ಲಿ ಜಮಾಯಿಸಿ, ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರು ರಸ್ತೆ ತಡೆಗೆ ಮುಂದಾದರು. ಇದರಿಂದ ಸಾರಿಗೆ ಬಸ್ ಸೇರಿ ಖಾಸಗಿ ವಾಹನ ಸವಾರರು ಪರದಾಡಿದ್ದು ಕಂಡು ಬಂತು. ಸುಮಾರು ಅರ್ಧ ಗಂಟೆ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿದ ನಂತರ ಜಿಲ್ಲಾಡಳಿತ ಭವನದ ಮುಂದೆ ಬಹಿರಂಗ ಸಭೆ ನಡೆಸಿದರು. ಸಭೆಯಲ್ಲಿ ಗುತ್ತಿಗೆದಾರರ ಸಂಘದ ಪ್ರಮುಖರು ಮಾತನಾಡಿ ಪ್ರೇರಣಾ ಸಂಸ್ಥೆ ಹಾಗೂ ಪ್ಯಾಕೇಜ್ ಗುತ್ತಿಗೆ ನೀಡುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ
ಸಂಘಟನೆ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಎಸ್ಸಿ/ ಎಸ್ಟಿ ಸಿವಿಲ್ ಗುತ್ತಿಗೆದಾರರ ಸಂಘದ ಜಿಲಾಧ್ಯಕ್ಷ ಹನುಮೇಶ ಕಡೆಮನಿ, ಗುತ್ತಿಗೆದಾರರಾದ ದೇವಪ್ಪ ಅರಕೇರಿ, ಯಮನೂರಪ್ಪ ನಡುಲಮನಿ, ಕೃಷ್ಣ ಇಟ್ಟಂಗಿ, ಶುಕ್ರಾಜ್ ತಾಳಕೇರಿ, ಶರಣಬಸವ ಹೂಗಾರ, ಎಲ್.ಎಂ.ಮಲ್ಲಯ್ಯ, ಸುರೇಶ, ದ್ಯಾಮಣ್ಣ ಪೂಜಾರ, ರಾಮಣ್ಣ ಚೌಡಕಿ, ಬಸವರಾಜ ನಾಯಕ, ಎಸ್. ಪ್ರಸಾದ, ರಾಜಶೇಖರ, ಮಹಾಂತೇಶ ನಾಯಕ ಸೇರಿ ಇತರರು ಇದ್ದರು. ಹೋರಾಟಗಾರರ ಜೊತೆ ಡಿಸಿ ಮಾತು ಹೋರಾಟನಿರತ ಗುತ್ತಿಗೆದಾರರ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿದರು. ಎಲ್ಲ ನ್ಯಾಯಯುತ ಬೇಡಿಕೆ ಈಡೇರಿಸುತ್ತೇನೆ. ನಿಯಮದಂತೆ ಕ್ರಷರ್ ಮಾಲೀಕರು ಶೇ. ೩೦ ರಷ್ಟು ಜಲ್ಲಿ ಕಲ್ಲು ಸರಕಾರಿ ಕೆಲಸಕ್ಕೆ ಮಾತ್ರ ಮಾರಾಟ ಮಾಡಬೇಕು. ಈ ನಿಯಮದಡಿ ಕ್ರಷರ್ ಮಾಲೀಕರು ನೇರವಾಗಿ ಗುತ್ತಿಗೆದಾರರಿಗೆ ಜಲ್ಲಿ ಕಲ್ಲು ಮಾರಾಟ ಮಾಡುವಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. ಇನ್ನು ನಮ್ಮ ವ್ಯಾಪ್ತಿಯ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಮೇಲೆ ಭರವಸೆ ಇಟ್ಟು, ಹೋರಾಟ ಹಿಂಪಡೆಯುವಂತೆ ಮನಃವೊಲಿಸಿದ್ದಾರೆ. ಈ ಹಿನ್ನೆಲೆ ಗುತ್ತಿಗೆದಾರರು ಹೋರಾಟವನ್ನು ಹಿಂಪಡೆದಿದ್ದಾರೆ.
ಹೋರಾಟಕ್ಕೆ ನಾನಾ ಸಂಘಟನೆ ಸಾಥ್ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಹೋರಾಟಕ್ಕೆ ಟಿಪ್ಪರ್ ಮಾಲೀಕರು, ಗಾರೆ ಕೆಲಸಗಾರರ ಸಂಘದ ಪದಾಧಿಕಾರಿಗಳು ಸೇರಿ ವಿವಿಧ ಸಂಘ- ಸಂಸ್ಥೆ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು. ಕಟ್ಟಡ ಸಾಮಗ್ರಿ ಮಾರಾಟ ವ್ಯವಸ್ಥೆಯಲ್ಲಿ ಏಕಸ್ವಾಮ್ಯತೆ ಸಾಧಿಸುವ ಮೂಲಕ, ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಬೆಲೆ ನಿಗದಿ ಮಾಡುವ ಪ್ರೇರಣಾ ಸಂಸ್ಥೆಯ ಹುನ್ನಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪರ್ ಮಾಲೀಕರು ತಮ್ಮ ಟಿಪ್ಪರ್ ಸಮೇತ ಬಂದು ಹೋರಾಟಕ್ಕೆ ಬೆಂಬಲ ನೀಡಿದರು.
ಕ್ರಷರ್ ಮಾಲೀಕರು ಸುಮಾರು 100 ಕೋಟಿ ರೂ. ಬಾಕಿ ಇದೆ ಎಂಬುದು ಶುದ್ಧ ಸುಳ್ಳು. ಯಾವುದೇ ಬಾಕಿ ಇದ್ದರೂ ನಮ್ಮ ಮುಂದೆ ಬಂದು ತೋರಿಸಲಿ. ಕೂಡಲೇ ಅವರ ಹಣ ಪಾವತಿಸುವ ವ್ಯವಸ್ಥೆ ಮಾಡುತ್ತೇವೆ. ಕ್ರಷರ್ ಮಾಲೀಕರು ಕ್ವಾರಿಯಲ್ಲಿ ತೆಗೆಯುವ ಶೇ. 30 ರಷ್ಟು ಜಲ್ಲಿ ಕಲ್ಲು ಸರಕಾರಿ ಕೆಲಸಕ್ಕೆ ಮಾರಾಟ ಮಾಡಬೇಕು ಎಂಬ ನಿಯಮ ಇದೆ. ಪ್ರೇರಣಾ ಸೇರಿ ಯಾವುದೇ ಏಜೆನ್ಸಿ ಮೂಲಕ ನಾವು ಸಾಮಗ್ರಿ ಖರೀದಿ ಮಾಡುವುದಿಲ್ಲ. ಶಾಸಕ, ಸಂಸದರು, ಎಲ್ಲ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿಸುವ ಮೂಲಕ ಮೀಸಲಾತಿ ಕೈ ತಪ್ಪುವಂತೆ ಮಾಡುತ್ತಿದ್ದಾರೆ. ಇದರಿಂದ ಸಣ್ಣ- ಪುಟ್ಟ ಗುತ್ತಿಗೆದಾರರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. - ಸುರೇಶ ಭೂಮರೆಡ್ಡಿ, ಜಿಲ್ಲಾಧ್ಯಕ್ಷ, ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘ,
ಗುತ್ತಿಗೆದಾರರು ಪ್ರೇರಣಾ ಸಂಸ್ಥೆ ಮೂಲಕ ಕಟ್ಟಡ ಸಾಮಾಗ್ರಿ ಖರೀದಿ ಮಾಡುವುದರಿಂದ ಆಡಿಟ್ ನಲ್ಲಿ ಸಮಸ್ಯೆ ಆಗುತ್ತದೆ. ಕ್ರಷರ್ ಮಾಲೀಕರಿಂದ ನೇರವಾಗಿ ಖರೀದಿ ಮಾಡಿದರೂ ಜಿಎಸ್ ಟಿ ಅಧಿಕಾರಿಗಳು ಪ್ರತಿ ತಿಂಗಳು ನೂರೊಂದು ತಕರಾರು ಎತ್ತುತ್ತಾರೆ. ನಾವು ಮಧ್ಯವರ್ತಿ ಸಂಸ್ಥೆ ಮೂಲಕ ಕಟ್ಟಡ ಸಾಮಾಗ್ರಿ ಖರೀದಿ ಮಾಡಿದರೆ ಮತ್ತಷ್ಟು ಸಮಸ್ಯೆ ಆಗಲಿದೆ. ಇದನ್ನು ಯಾವುದೇ ಕಾರಣಕ್ಕೆ ನಾವು ಒಪ್ಪುವುದಿಲ್ಲ. - ಕೃಷ್ಣ ಇಟ್ಟಂಗಿ, ಗುತ್ತಿಗೆದಾರ
ಸಂಸದ ರಾಜಶೇಖರ ಹಿಟ್ನಾಳ ಅವರು ಗುತ್ತಿಗೆದಾರರನ್ನು ಉದ್ರಿ ಮಂದಿ ಎಂದು ಕರೆಯುತ್ತಾರೆ. ನಾವು ಯಾರ ಬಳಿ ಎಷ್ಟು ಉದ್ರಿ ಇಟ್ಟಿದ್ದೇವೆ ಎಂಬುದನ್ನು ಬಹಿರಂಗಪಡಿಸಲಿ. ತಮ್ಮ ಹಿತಾಸಕ್ತಿಗೆ ಪ್ರೇರಣಾ ಸಂಸ್ಥೆ ಹುಟ್ಟುಹಾಕಿ, ಗುತ್ತಿಗೆದಾರರು ಮತ್ತು ಕ್ರಷರ್ ಮಾಲೀಕರ ನಡುವೆ ಸಮಸ್ಯೆ ಸೃಷ್ಠಿಸಿದ್ದಾರೆ. ಪ್ಯಾಕೇಜ್ ಮಾಡಿ, ಗುತ್ತಿಗೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಆಶಯ ಮಣ್ಣು ಪಾಲು ಮಾಡುತ್ತಿದ್ದಾರೆ. - ಹನುಮೇಶ ಕಡೆಮನಿ, ಗುತ್ತಿಗೆದಾರ
ಪ್ರೇರಣಾ ಸಂಸ್ಥೆಯಿಂದ ಬೂದಗುಂಪ ಭಾಗದ ಸುಮಾರು 50 ರಿಂದ 60 ಟಿಪ್ಪರ್ ಮಾಲೀಕರಿಗೆ ಸಮಸ್ಯೆ ಆಗಿದೆ. ಕ್ರಷರ್ ಸ್ಥಾಪನೆಯಿಂದ ನಮ್ಮ ಜಮೀನು ಹಾಳಾಗಿವೆ. ನಮಗೆ ಈಗ ಟಿಪ್ಪರ್ ಜೀವನ ಆಧಾರ ಆಗಿವೆ. ಆದರೆ, ಪ್ರೇರಣಾ ಸಂಸ್ಥೆ ಮೂಲಕವೇ ಜಲ್ಲಿ ಕಲ್ಲು ಖರೀದಿ ಮಾಡಬೇಕು ಎಂಬ ನಿಯಮದಿಂದ ನಮಗೆ ತೊಂದರೆ ಆಗಿವೆ. ನಾವು ಕೆಲಸ ಮಾಡುವುದು ಟಿಪ್ಪರ್ ಡಿಸೇಲ್ ಗೆ ಸಾಲುತ್ತಿಲ್ಲ. ಸಾಕಷ್ಟು ಟಿಪ್ಪರ್ ಮಾಲೀಕರು ಇಎಂಐ ಕಟ್ಟಲು ಸಾಧ್ಯವಾಗದೇ ಬೀದಿಗೆ ಬಂದಿದ್ದೇವೆ. - ಟಿಪ್ಪರ್ ಮಾಲೀಕ ಫೋಟೋ ಕೊಪ್ಪಳದ ಬಸವೇಶ್ವರರ ವೃತ್ತದಲ್ಲಿ ಪ್ರೇರಣಾ ಸಂಸ್ಥೆ ಮೂಲಕ ಕಟ್ಟಡ ಸಾಮಾಗ್ರಿ ಖರೀದಿ ವಿರೋಧಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಬುಧವಾರ ಪ್ರತಿಭಟಿಸಿದರು. ಫೋಟೋ ಕೊಪ್ಪಳದ ಬಸವೇಶ್ವರರ ವೃತ್ತದಲ್ಲಿ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ರಸ್ತೆ ಬಂದ್ ಮಾಡಲು ಯತ್ನಿಸಿದರು.
