ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
24-03-2025
ಕೇರಳದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ
ದರ್ಶನ್, ನಿನ್ನೆಯಷ್ಟೆ ಕೇರಳದ ಕಣ್ಣೂರಿನ ಭಗವತಿ ದೇವಾಲಯದಲ್ಲಿ ಕಾಣಿಸಿಕೊಂಡಿದ್ದರು. ಅವರೊಟ್ಟಿಗೆ ಅವರ ಪುತ್ರ ವಿನೇಶ್, ಧನ್ವೀರ್ ಗೌಡ ಸಹ ಇದ್ದರು. ಈ ದೇವಾಲಯವು ಶತ್ರು ವಿನಾಶ ಪೂಜೆಗೆ ಪ್ರಸಿದ್ಧಿ ಪಡೆದಿದ್ದು, ದೇವಾಲಯದಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ್ದಾರೆ ದರ್ಶನ್ ಎನ್ನಲಾಗುತ್ತಿದೆ. ಇದೀಗ ಹೊರಬಿದ್ದಿರುವ ಮತ್ತೊಂದು ವಿಷಯವೆಂದರೆ ನಿನ್ನೆ ದರ್ಶನ್ ಜೊತೆಗೆ ಮತ್ತೊಬ್ಬ ಕೊಲೆ ಆರೋಪಿಯೂ ಇದ್ದ. ಆದರೆ ಆತ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿಯಲ್ಲ. ಬೇರೊಂದು ಕೊಲೆ ಪ್ರಕರಣದ ಆರೋಪಿ. ಇಬ್ಬರು ಕೊಲೆ ಆರೋಪಿಗಳು ಒಟ್ಟಿಗೆ ಹೋಗಿ ಶತ್ರು ಸಂಹಾರಕ್ಕಾಗಿ ಪೂಜೆ ಮಾಡಿಸಿದ್ದಾರೆ. ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯದಲ್ಲಿ ದರ್ಶನ್, ವಿನೀಶ್ ಮತ್ತು ಧನ್ವೀರ್ ಮಾತ್ರವೇ ಇರಲಿಲ್ಲ. ಅವರೊಟ್ಟಿಗೆ ಪ್ರಜ್ವಲ್ ರೈ ಎಂಬಾತನೂ ಇದ್ದ. ಈತನೂ ಸಹ ದರ್ಶನ್ ರೀತಿಯಲ್ಲಿಯೇ ಕುಖ್ಯಾತ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ. 2017 ರ ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಪ್ರಜ್ವಲ್ ರೈ. ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಜಲೀಲ್ ಕೊಲೆ ಪ್ರಕರಣ ಆಗ ಸಂಚಲನ ಸೃಷ್ಟಿಸಿತ್ತು. ಆ ಕೊಲೆ ಪ್ರಕರಣದಲ್ಲಿ ಒಟ್ಟು 11 ಜನರ ಬಂಧನವಾಗಿತ್ತು, ಅದರಲ್ಲಿ ಪ್ರಜ್ವಲ್ ರೈ ಸಹ ಒಬ್ಬ. ಈಗ ಇದೇ ಪ್ರಜ್ವಲ್ ರೈ, ದರ್ಶನ್ ಅವರನ್ನು ಕೇರಳದ ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು ಎನ್ನಲಾಗುತ್ತಿದೆ.
