ಮೈದುಂಬಿದ ಕಣಕಟ್ಟೆ ಹೋಬಳಿ ಕೆರೆಗಳಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡರಿಂದ ಬಾಗಿನ ಅರ್ಪಣೆ
ವನವಳ್ಳಿ ಏತ ನೀರಾವರಿ ಯೋಜನೆ ಫಲವಾರಿಯಾಗಿ; “ಜನಸೇವೆಯೇ ನನ್ನ ಹಂಬಲ” – ಶಾಸಕ ಅರಸೀಕೆರೆ: ಬಯಲುಸೀಮೆ ರೈತರ ಬದುಕು ನೀರು ಮತ್ತು ವಿದ್ಯುತ್ ಪೂರೈಕೆಯಿಂದಲೇ ಬದಲಾಗುತ್ತದೆ ಎಂದು ತಿಳಿಸಿದ್ದಾರೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ. ವನವಳ್ಳಿ ಏತ ನೀರಾವರಿ ಯೋಜನೆಯ ಫಲವಾಗಿ ಮೈದುಂಬಿಕೊಂಡಿರುವ ಕಣಕಟ್ಟೆ ಹೋಬಳಿಯ ಕೆರೆಗಳಿಗೆ ಶುಕ್ರವಾರ ಅವರು ಬಾಗಿನ ಅರ್ಪಿಸಿದರು. ಹೊಳಲ್ಕೆರೆ, ಹರಳಕಟ್ಟ, ಡಿ.ಎಂ.ಕುರ್ಕೆ, ಚಿಕ್ಕೊಂಡಿಹಳ್ಳಿ, ಮಾಡಾಳು, ಸಾತನಗೆರೆ ಹಾಗೂ ಕಣಕಟ್ಟೆ ಸೇರಿದಂತೆ ಅನೇಕ ಕೆರೆಗಳು ಈಗ ಹೇಮಾವತಿ ನೀರಿನಿಂದ ತುಂಬಿ ಹರಿಯುತ್ತಿವೆ. ಇದನ್ನು ಕಂಡು ತೃಪ್ತಿಯಿಂದ ಮಾತನಾಡಿದ ಶಾಸಕರು, “ಹೇಮಾವತಿ ಮೂಲದಿಂದ ಪ್ರತ್ಯೇಕ ಕೊಳವೆ ಕಲ್ಪಿಸಬೇಕೆಂಬ ಹೋರಾಟವನ್ನು ನಾನು ಸದನದ ಒಳಗೂ ಹೊರಗೂ ನಡೆಸಿದ ಪರಿಣಾಮ, ಇಂದು ಈ ಭಾಗಕ್ಕೆ ಸಮೃದ್ಧ ನೀರು ತಲುಪುತ್ತಿದೆ,” ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಎಂ.ಎಸ್.ವಿ. ಸ್ವಾಮಿ ಮಾತನಾಡಿ, “ವನವಳ್ಳಿ ಏತ ನೀರಾವರಿ ಸಾಕಾರಗೊಳ್ಳಲು ಶಾಸಕರ ಹೋರಾಟವೇ ಮುಖ್ಯ ಕಾರಣ. ಈ ಯೋಜನೆ ಕಣकಟ್ಟೆ ಹೋಬಳಿಗೆ ನಿಜವಾದ ವರದಾನದಂತಾಗಿದೆ,” ಎಂದರು. ಈ ಯೋಜನೆಯಿಂದ ಅಂತರ್ಜಲ ಹೆಚ್ಚಳವಾಗಲಿದ್ದು, ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿರುವ ರೈತರಿಗೂ ದೊಡ್ಡ ನೆರವಾಗಲಿದೆ. ಸಂಗ್ರಹಿತ ನೀರಿನ ಸದುಪಯೋಗಕ್ಕಾಗಿ ಹೆಚ್ಚುವರಿ ಕೃಷಿ ಪಂಪ್ಸೆಟ್ ವ್ಯವಸ್ಥೆ ಮಾಡಲು ಶಾಸಕರು ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಹೇಮಾವತಿ ಜಲಾಶಯ ಯೋಜನೆಯ ಎಇಇ ನಾಗಭೂಷಣ, ರಾಂಪುರ ಗ್ರಾ.ಪಂ. ಅಧ್ಯಕ್ಷ ಸುರೇಶ್, ಡಿ.ಎಂ. ಕುರ್ಕೆ ಸೊಸೈಟಿ ಅಧ್ಯಕ್ಷ ಸುರೇಶ್, ಚನ್ನಬಸಪ್ಪ, ಮಾಜಿ ತಾ.ಪಂ. ಅಧ್ಯಕ್ಷ ನಂಜುಂಡಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಶಾಸಕರ ಮನದಾಳದ ಮಾತು “ನನಗೆ ಅಧಿಕಾರದ ಲಾಲಸೆ ಇಲ್ಲ. ಅವಕಾಶ ಸಿಕ್ಕರೆ ಜನಸೇವೆ ಮಾಡಲು ಸದಾ ಸಿದ್ದ. ಜನರ ಆಶೀರ್ವಾದ ಇದ್ದರೆ ಮಂತ್ರಿ ಸ್ಥಾನ ಕೂಡ ನನಗೆ ಒಲಿಯಬಹುದು. ಅವಕಾಶ ದೊರೆತರೆ ಅರಸೀಕೆರೆಯನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ದೃಢಪ್ರಯತ್ನ ಮಾಡುತ್ತೇನೆ,” ಎಂದು ಶಾಸಕರು ಹೃದಯದ ಮಾತು ಹಂಚಿಕೊಂಡರು.
ಇತರೆ ಸುದ್ದಿಗಳು